ಜಲಿಯನ್ ವಾಲಾ ಬಾಗ್ ಸ್ಮಾರಕ ಅಭಿವೃದ್ಧಿ : ರಾಹುಲ್ ಗಾಂಧಿ ತದ್ವಿರುದ್ಧವಾಗಿ, ತುಂಬಾ ಚೆನ್ನಾಗಿದೆ ಎಂದ ಪಂಜಾಬ್ ಸಿಎಂ ಅಮರೀಂದರ್ | ಜನತಾ ನ್ಯೂಸ್
ಅಮೃತಸರ್ : ಪಂಜಾಬ್ನಲ್ಲಿ ಜಲಿಯನ್ ವಾಲಾಬಾಗ್ ವಿವಾದಾತ್ಮಕ ನವೀಕರಣದ ಕುರಿತು ಕಾಂಗ್ರೆಸ್ ನಾಯಕರು ಎರಡು ವಿಭಿನ್ನ ನಿಲುವುಗಳನ್ನು ವ್ಯಕ್ತಪಡಿಸಿದ್ದಾರೆ. 1919 ರಲ್ಲಿ ಜನರಲ್ ಡೈಯರ್ ನೇತೃತ್ವದಲ್ಲಿ ಬ್ರಿಟಿಷರು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದ ಪುರುಷರು ಮತ್ತು ಮಹಿಳೆಯರ ಮೇಲೆ ಗುಂಡಿನ ದಾಳಿ ನಡೆಸಿದ ನಂತರ 1000 ಕ್ಕೂ ಹೆಚ್ಚು ಜನರು ಪಂಜಾಬಿನ ಜಲಿಯನ್ ವಾಲಾ ಬಾಗ್ ನಲ್ಲಿ ಸಾವನ್ನಪ್ಪಿದರು.
ನವೀಕರಿಸಿದ ಜಲಿಯನ್ ವಾಲಾ ಬಾಗ್ ಬಗ್ಗೆ ಹೇಳಿಕೆ ನೀಡಿದ ಕಾಂಗ್ರೆಸ್ ಮುಖಂಡ ಹಾಗೂ ಸಂಸದ ರಾಹುಲ್ ಗಾಂಧಿ ಅವರು, ಇದು ಹುತಾತ್ಮರಿಗೆ ಮಾಡಿದ ಅವಮಾನ, ಎಂದು ಹೇಳಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ, ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ರಾಹುಲ್ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ ಮತ್ತು ನವೀಕರಿಸಿದ ಸ್ಮಾರಕವು "ಬಹಳ ಚೆನ್ನಾಗಿದೆ" ಎಂದು ಪ್ರಶಂಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜಲಿಯನ್ ವಾಲಾ ಬಾಗ್ ಸ್ಮಾರಕ್ ನ ನವೀಕರಿಸಿದ ಸಂಕೀರ್ಣವನ್ನು ಕಳೆದ ವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಷ್ಟ್ರಕ್ಕೆ ಸಮರ್ಪಿಸಿದರು. ಕಾರ್ಯಕ್ರಮದ ಸಮಯದಲ್ಲಿ, ಅವರು ಸ್ಮಾರಕ್ನಲ್ಲಿ ಮ್ಯೂಸಿಯಂ ಗ್ಯಾಲರಿಗಳನ್ನು ಉದ್ಘಾಟಿಸಿದರು. ಸಂಕೀರ್ಣವನ್ನು ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರ ಕೈಗೊಂಡ ಬಹು ಅಭಿವೃದ್ಧಿ ಉಪಕ್ರಮಗಳನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗಿತ್ತು.
ಸ್ಮಾರಕದ ಅಭಿವೃದ್ಧಿ ಕಾರ್ಯಕ್ಕಾಗಿ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರೆ, ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಇಂದು ಜಲಿಯನ್ ವಾಲಾಬಾಗ್ ಸ್ಮಾರಕದ ಮೇಕ್ಓವರ್ ಅನ್ನು ಶ್ಲಾಘಿಸಿದರು ಮತ್ತು ನವೀಕರಿಸಿದ ಸಂಕೀರ್ಣವು ಅವರಿಗೆ "ತುಂಬಾ ಚೆನ್ನಾಗಿ ಕಾಣುತ್ತಿದೆ" ಎಂದು ಹೇಳಿದರು. "ಏನನ್ನು ತೆಗೆಯಲಾಗಿದೆ ಎಂದು ನನಗೆ ಗೊತ್ತಿಲ್ಲ. ನನಗೆ ಇದು ತುಂಬಾ ಚೆನ್ನಾಗಿ ಕಾಣುತ್ತದೆ" ಎಂದು ಅಮರೀಂದರ್ ಹೇಳಿದ್ದಾರೆ.