ತೆರಿಗೆ ಸಂಗ್ರಹಕ್ಕೆ ಬೆಲೆ ಏರಿಕೆ ಅನಿವಾರ್ಯ, ಸಮರ್ಥನೆ ಮಾಡಿದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್! | ಜನತಾ ನ್ಯೂಸ್
ಬೆಂಗಳೂರು : ಕೇಂದ್ರ ಸರ್ಕಾರ ಹೀಗೆ ಸಿಲಿಂಡರ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುತ್ತಿರುವ ಹಿಂದಿನ ಕ್ರಮಗಳನ್ನು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ಬೇರೆ ಬೇರೆ ಯೋಜನೆಗಳಿಗೆ ಹಣ ಒದಗಿಸಲು ಬೆಲೆ ಏರಿಕೆ ಅನಿವಾರ್ಯವಾಗಿದೆ. ಹಣದುಬ್ಬರ ಕೇಂದ್ರ ಸರ್ಕಾರದ ಹತೋಟಿಯಲ್ಲಿದೆ. ಇದೆಲ್ಲದರ ಬಗ್ಗೆ ಆರ್ ಬಿಐ ಗವರ್ನರ್ ಮಾತನಾಡುತ್ತಾರೆ ಜನರು ಟಮೊಟೋ ಪೆಟ್ರೋಲ್ ಬೆಲೆ ಹೆಚ್ಚಾಗಿದೆ ಎಂದು ದೂರಬಾರದು ಎಂದರು.
ಬಡವರಿಗೆ ಮೋದಿ ಸರ್ಕಾರ ಅನೇಕ ಯೋಜನೆ ಮಾಡಿದೆ. ರೈತರ ಖಾತೆಗಳಿಗೆ ಆರು ಸಾವಿರ ರೂ. ಹಾಕುತ್ತಿದ್ದಾರೆ. ಆಯುಷ್ಮಾನ್ ಭಾರತ ಯೋಜನೆಯಿಂದ ಜನರಿಗೆ ಅನುಕೂಲವಾಗಿದೆ. ಜಲ ಮಿಷನ್ ಯೋಜನೆ ಮಾಡಲಾಗಿದೆ. ಈ ಎಲ್ಲಾ ಯೋಜನೆ ಮೂಲಕ ಬಡವರಿಗೆ ಅನುಕೂಲವಾಗಿದೆ. ಸರ್ಕಾರಕ್ಕೆ ತೆರಿಗೆ ಸಂಗ್ರಹ ಆಗಬೇಕಿದೆ, ಆಗುತ್ತಿದೆ ಎಂದು ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡರು.
ಯುಪಿಎ ಸರ್ಕಾರ ಇದ್ದಾಗಲೂ ಬೆಲೆ ಏರಿಕೆ ಆಗಿತ್ತು. ಆಗ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್, ನೂರು ದಿನಗಳಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ತರುವುದಾಗಿ ಹೇಳಿದ್ದರು. ಆದರೆಅದು ಅವರಿಂದ ಆಗಿರಲಿಲ್ಲ, ಶೇ 15ರಷ್ಟು ಬೆಲೆ ಏರಿಕೆ ಆಗಿತ್ತು. ಆದರೆ ಮೋದಿ ಅವಧಿಯಲ್ಲಿ ಬೆಲೆ ನಿಯಂತ್ರಣದಲ್ಲಿ ಇದೆ ಎಂದು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.