ಪೊಲೀಸ್ ಆಯುಕ್ತರಿಂದ ಥಳಿತ ಆರೋಪ, ಪೊಲೀಸ್ ಕಮೀಷನರ್ ಅಮಾನತಿಗೆ ಸಿದ್ದು ಆಗ್ರಹ | ಜನತಾ ನ್ಯೂಸ್
ಬೆಂಗಳೂರು : ಬುಧವಾರ ತಡರಾತ್ರಿ ಕಲಬುರಗಿ ನಗರದ ಹಫ್ತ್ ಗುಂಬಜ್ ಬಳಿ ಪೊಲೀಸ್ ಕಮಿಷನರ್ ಡಾ.ವೈ.ಎಸ್. ರವಿಕುಮಾರ್ ಮನಬಂದಂತೆ ಕಾಂಗ್ರೆಸ್ ಕಾರ್ಯಕರ್ತನನ್ನು ಥಳಿಸಿದ್ದು, ಕೂಡಲೇ ಅವರನ್ನು ಅಮಾನತು ಮಾಡಬೇಕೆಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಈ ವಿಚಾರವಾಗಿ ಟ್ವೀಟ್ ಮಾಡಿದ ಅವರು, ಕಲಬುರಗಿ ಪೊಲೀಸ್ ಕಮೀಷನರ್ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಪೊಲೀಸ್ ಕಮೀಷನರ್ರನ್ನು ಈ ಕೂಡಲೇ ಅಮಾನತು ಮಾಡುವಂತೆ ಸಿಎಂಗೆ ಆಗ್ರಹಿಸಿದ್ದಾರೆ. ಯಾವುದೇ ತಪ್ಪು ಮಾಡದಿದ್ದರೂ ಹೀಗೆ ಥಳಿಸಿದ್ದು ಖಂಡನೀಯ, ಅಮಾನತು ಮಾಡುವ ಮೂಲಕ ಕಾರ್ಯಕರ್ತನಿಗೆ ನ್ಯಾಯ ಒದಗಿಸಬೇಕು ಎಂದಿದ್ದಾರೆ.
Gulbarga police commissioner has assaulted an @INCKarnataka party worker. I condemn the high handedness of the commissioner.
— Siddaramaiah (@siddaramaiah) September 2, 2021
I urge @CMofKarnataka to suspend the commissioner & take action against him, and ensure justice to the victim. pic.twitter.com/nPmoVoIZk9
ಕಾಂಗ್ರೆಸ್ ಶಾಸಕಿ ಖನೀಜ್ ಫಾತೀಮಾ ಅವರನ್ನು ಕಳೆದ ರಾತ್ರಿ ಮನೆಗೆ ಬಿಡಲು ತೆರಳುತ್ತಿದ್ದಾಗ ನಗರ ಪೊಲೀಸ್ ಆಯುಕ್ತ ಡಾ.ವೈ.ಎಸ್.ರವಿಕುಮಾರ್ ಅವರು ಕಾರು ತಡೆದು ತಮಗೆ ಥಳಿಸಿದ್ದಾರೆ ಎಂದು ಶಾಸಕರ ಸಹೋದರ ಸಂಬಂಧಿ, ಕಾಂಗ್ರೆಸ್ ಮುಖಂಡ ಆದಿಲ್ ಸುಲೇಮಾನ್ ಆರೋಪಿಸಿದ್ದಾರೆ.
ನಂತರ ನನ್ನನ್ನು ಹಿಡಿದು ಶಾಸಕರ ಹೆಸರು ಹೇಳಿದ ಮೇಲೂ ತಮಗೆ ಮನಬಂದಂತೆ ಥಳಿಸಿದರು. ಅಲ್ಲದೇ, ತಮ್ಮ ಪೊಲೀಸ್ ಸಿಬ್ಬಂದಿಗೆ ನನಗೆ ಹೊಡೆದು ಕಾಲು ಮುರಿಯುವಂತೆ ಹೇಳಿದರು. ಅವರು ಹೊಡೆಯಲು ಹಿಂದೆ-ಮುಂದೆ ನೋಡಿದಾಗ ಆಯುಕ್ತರೇ ಪೊಲೀಸರಿಗೂ ಥಳಿಸಿದರು ಎಂದರು.
ಶಾಸಕಿ ಖನೀಜ್ ಫಾತೀಮಾ ಮಾತನಾಡಿ, ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ ಬಿಜೆಪಿಯವರಿಗೆ ಸೋಲುವ ಭಯ ಕಾಡುತ್ತಿದೆ. ಹೀಗಾಗಿ ಪೊಲೀಸರ ಮೇಲೆ ಒತ್ತಡ ಹೇರಿ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರ ಮೇಲೆ ದೌರ್ಜನ್ಯ ಎಸಗಿಸುವ ಕೆಲಸವಾಗುತ್ತದೆ. ಚುನಾವಣೆ ಗೆಲ್ಲಲು ಬಿಜೆಪಿಯವರು ಏನಾಬೇಕಾದರೂ ಮಾಡುತ್ತಾರೆ ಎಂಬುದನ್ನು ಇದು ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.