ಸರ್ಕಾರಿ ವಸತಿ ಗೃಹಕ್ಕಾಗಿ ಭಿಕ್ಷೆ ಬೇಡುವುದಿಲ್ಲ: ಸಭಾಪತಿ ಬಸವರಾಜ ಹೊರಟ್ಟಿ | ಜನತಾ ನ್ಯೂಸ್
ಬೆಂಗಳೂರು : ಸರ್ಕಾರಿ ವಸತಿ ಗೃಹಕ್ಕಾಗಿ ಭಿಕ್ಷೆ ಬೇಡುವುದಿಲ್ಲ. ಅದು ಸರ್ಕಾರಕ್ಕೆ ಬಿಟ್ಟಿದ್ದು ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಎಲ್ಲರಿಗೂ ನಿವಾಸ ಇದೆ, ಆದ್ರೆ ನಮ್ಮ ಹಣೆಬರಹ ನೋಡಿ. ಪ್ರೊಟೋಕಾಲ್ ಪ್ರಕಾರ ಸಿಎಂಗಿಂತ ನಾವು ಮೇಲಿನವರು. ಆದ್ರೂ ಸರ್ಕಾರ ನಮಗೆ ಸರ್ಕಾರಿ ನಿವಾಸ ಹಂಚಿಕೆ ಮಾಡಿಲ್ಲ. ಇಂದು ಕೂಡ ಮತ್ತೆ ಪತ್ರ ಬರೆದಿದ್ದೇನೆ, ನಿವಾಸ ನೀಡಿಲ್ಲ. ನಮಗೆ ಶಕ್ತಿ ಇಲ್ಲವೆಂದುಕೊಂಡಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.
ಕಾವೇರಿ ನಿವಾಸ ನಿಗದಿತ ನಿವಾಸ ಅಲ್ಲ. ಆದರೂ ಕಾವೇರಿ ನಿವಾಸದಲ್ಲಿ ಸಿಎಂ ಆದವರು ಇರ್ತಾರೆ. ಏರ್ಪೋರ್ಟ್ನಲ್ಲಿ ಸಿಎಂ, ಗೃಹಸಚಿವರು ನೇರ ಹೋಗ್ತಾರೆ. ಸಾಂವಿಧಾನಿಕವಾಗಿ ನಾವು ಅವರಿಗಿಂತ ಮೇಲಿನವರು. ಆದರೆ, ನಮಗೆ ಮಾತ್ರ ಎಲ್ಲಾ ತಪಾಸಣೆ ಮಾಡುತ್ತಾರೆ ಎಂದು ಹೊರಟ್ಟಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮನೆ ಹಂಚಿಕೆ ಮಾಡಲು ನಾನು, ಸ್ಪೀಕರ್ ಪತ್ರ ಬರೆದಿದ್ದೇವೆ. ನನಗೆ ಗಾಂಧಿ ಭವನ ರಸ್ತೆಯ ನಿವಾಸವನ್ನು ಕೊಟ್ಟರೆ ಕೊಡಲಿ. ಇಲ್ಲದಿದ್ದರೆ ನನಗೆ ಸರ್ಕಾರಿ ನಿವಾಸ ಬೇಡ ಎಂದು ಹೊರಟ್ಟಿ ಹೇಳಿದ್ದಾರೆ.
ಸಂಸದೀಯ ವ್ಯವಸ್ಥೆಯಲ್ಲಿ ಸಾಂವಿಧಾನಿಕ ಹುದ್ದೆಗಳ ಪೈಕಿ ವಿಧಾನ ಪರಿಷತ್ ಸಭಾಪತಿ ಹಾಗೂ ವಿಧಾನಸಭೆ ಸಭಾಧ್ಯಕ್ಷರು ಸೇರಿದ್ದು, ಸಭಾಪತಿ ಮತ್ತು ಸಭಾಧ್ಯಕ್ಷರಿಗೆ ನಿರ್ದಿಷ್ಟ ವಸತಿ ಗೃಹ ಗೊತ್ತುಪಡಿಸಬೇಕು ಎಂದು ಹಿಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಜಂಟಿಯಾಗಿ ಪತ್ರ ಬರೆದಿದ್ದೇವೆ ಎಂದರು. ಹಿಂದಿನ ಸಭಾಪತಿಗಳಿಗೆ ಹಂಚಿಕೆ ಮಾಡಿದ್ದ ವಸತಿ ಗೃಹ ಖಾಯಂ ಆಗಿ ಗೊತ್ತುಪಡಿಸಲು ತಿಳಿಸಲಾಗಿದೆ. 8ನೇ ಬಾರಿಗೆ ಬರೆದಿರುವ ಕೊನೆಯ ಪತ್ರವಿದು ಎಂದು ಹೊರಟ್ಟಿ ಹೇಳಿದರು.
ಸಭಾಪತಿ, ಸಭಾಧ್ಯಕ್ಷರು ಎಲ್ಲಿಗೂ ಹೋಗುವ ಹಾಗಿಲ್ಲ. ಯಾವುದೇ ರಾಜಕೀಯ ಚಟುವಟಿಕೆಗಳಲ್ಲಿ ಭಾಗಿಯಾಗುವಂತಿಲ್ಲ. ಹಾಗಾಗಿ, ಇಂಥದ್ದೇ ಮನೆ ನೀಡುವಂತೆ ಪತ್ರ ಬರೆದಿದ್ದೇನೆ. ಆ ಮನೆ ಕೊಟ್ಟರೆ ಮಾತ್ರ ಹೋಗುತ್ತೇನೆ ಎಂದು ಖಡಕ್ ಆಗಿ ಹೇಳಿದರು. ಯಾರೂ ಕೂಡ ಸಭಾಪತಿ, ಸಭಾಧ್ಯಕ್ಷ ಆಗಲು ಒಪ್ಪಲ್ಲ. ಆದರೆ, ನಾನು ಖುಷಿಯಿಂದ ಆಗಿದ್ದೇನೆ ಎಂದರು.