ಸೆ. 13 ರಿಂದ 24 ಮುಂಗಾರು ಅಧಿವೇಶನ, 10 ದಿನಗಳ ಕಾಲ ವಿಧಾನಸಭೆ ಅಧಿವೇಶನ | ಜನತಾ ನ್ಯೂಸ್
ಬೆಂಗಳೂರು : ಸೆಪ್ಟೆಂಬರ್ 13 ರಿಂದ 24 ರವರೆಗೆ ಹತ್ತು ದಿನಗಳ ಕಾಲ ಕರ್ನಾಟಕದ 15ನೇ ವಿಧಾನಸಭೆಯ 10ನೇ ಅಧಿವೇಶನ ನಡೆಯಲಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
15ನೇ ವಿಧಾನಸಭೆಯ 10ನೇ ಅಧಿವೇಶನ ಸೆಪ್ಟೆಂಬರ್ 13 ರಿಂದ 24ರ ವರೆಗೆ ನಡೆಯಲಿದ್ದು, ಕಲಾಪ ನಡೆಯುವ ವೇಳೆ ಸಿಎಂ ಒಳಗೊಂಡಂತೆ ಎಲ್ಲಾ ಸಚಿವರು, ಶಾಸಕರು ಕಡ್ಡಾಯವಾಗಿ ಹಾಜರಿರಬೇಕೆಂದು ಮನವಿ ಮಾಡಿರುವುದಾಗಿ ವಿಧಾನಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಅಧಿವೇಶನ ಯಶಸ್ವಿಯಾಗಿ ನಡೆಯಲು ಆಡಳಿತ ಹಾಗೂ ಪ್ರತಿಪಕ್ಷದವರ ಸಹಕಾರ ಕೋರುತ್ತೇನೆ ಎಂದರು.
ಅಧಿವೇಶನದಲ್ಲಿ ಚರ್ಚೆಯಾಗಲು ಇದುವರೆಗೂ 18 ಬಿಲ್ಗಳು ಬಂದಿವೆ. ನಾಲ್ಕು ಪೆಂಡಿಂಗ್ ಇರುವ ಬಿಲ್ಗಳಿವೆ. ಕಾರ್ಯದರ್ಶಿಗಳಿಗೆ ಪತ್ರ ಬರೆದು ಎಲ್ಲಾ ಸದಸ್ಯರಿಗೂ ಬಿಲ್ ಕಾಪಿ ಕೊಡಲು ಹೇಳಿದ್ದೇನೆ. ಇನ್ನು ಮೇಲೆ ಬರುವ ಬಿಲ್ಗಳ ಬಗ್ಗೆ ಏನು ಮಾಡಬೇಕು ಅಂತ ಸಂಬಂಧಿಸಿದವರ ಜೊತೆ ಚರ್ಚಿಸುತ್ತೇನೆ ಎಂದರು. ಸಭಾಧ್ಯಕ್ಷನಾಗಿ ಮೊದಲೇ ಬರಬೇಕು. ಎಲ್ಲಾ ವಿಧೇಯಕಗಳು ಸದನದಲ್ಲಿ ಮಂಡನೆಯಾಗುವಂತೆ ಮಾಡಬೇಕು. ಸರ್ಕಾರವೂ ಸಹ ಅಷ್ಟೇ ಕಾಳಜಿಯಿಂದ ಸ್ಪಂದಿಸಬೇಕು ಎಂದರು.
ಅಧಿವೇಶನ 10 ದಿನ ಇರಲಿದೆ. ಬಜೆಟ್ ಅಧಿವೇಶನದ ಬಳಿಕ ನಡೆಯುತ್ತಿದೆ. ಸದನವನ್ನು ಗಂಭೀರವಾಗಿ ನಡೆಸಲು ನಿರ್ಧರಿಸಿದ್ದು, ಸಿಎಂ, ವಿಪಕ್ಷ ನಾಯಕರು ಹಾಗೂ ಎಲ್ಲಾ ಶಾಸಕರಿಗೆ ಮನವಿ ಮಾಡಿದ್ದೇನೆ. ಯಾರೂ ಗೈರಾಗದೆ ಕಡ್ಡಾಯವಾಗಿ ಭಾಗಿಯಾಗಬೇಕು ಎಂದು ಸೂಚಿಸಿದರು.
ಸಾರ್ವಜನಿಕರ ವೀಕ್ಷಣೆಗೆ ಅವಕಾಶ: ಕೋವಿಡ್ ಕಾರಣದಿಂದ ವಿಧಾನಸಭೆಯ ಕಲಾಪ ವೀಕ್ಷಣೆಗೆ ಸಾರ್ವಜನಿಕರು ಬರುವುದನ್ನು ನಿರ್ಬಂಧಿಸಲಾಗಿತ್ತು. ಈ ಬಾರಿ ಸಾರ್ವಜನಿಕರ ವೀಕ್ಷಣೆಗೆ ಅನುಮತಿ ನೀಡಲಾಗಿದೆ ಎಂದು ಸ್ಪೀಕರ್ ತಿಳಿಸಿದರು.