ಹಸುಗೂಸನ್ನು ಪೊದೆಗೆಸೆದು ಹೋದ ಕ್ರೂರಿಗಳು, ಮಗುವೇ ನೀಡಿತು ಎಸೆದು ಹೋದವರ ವಿಳಾಸ! | ಜನತಾ ನ್ಯೂಸ್
ಚಿಕ್ಕಮಗಳೂರು : ನವಜಾತ ಶಿಶುವನ್ನು ಕ್ರೂರಿಗಳು ಪೊದೆಗೆ ಎಸೆದು ಹೋದ ಮನಕಲುಕುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗುಳದಲ್ಲಿ ನಡೆದಿದೆ.
ಪೊದೆಯೊಳಗಿನಿಂದ ಹಸುಗೂಸಿನ ಕೂಗು ಕೇಳಿದ ಸ್ಥಳೀಯರು ಮಗುವನ್ನು ರಕ್ಷಣೆ ಮಾಡಿದ್ದು, ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಬಿಳಗುಳ ವಾಸಿ ಚಂದ್ರು ಎನ್ನುವವರು ದಾರಿಯಲ್ಲಿ ನಡೆದುಕೊಂಡು ಹೋಗುವಾಗ ಪೊದೆಯೊಳಗಿನಿಂದ ಮಗು ಅಳುವ ಶಬ್ಧವನ್ನ ಕೇಳಿ ಮಗುವಿನ ರಕ್ಷಣೆ ಮಾಡಿದ್ದಾರೆ. ಮಗುವನ್ನ ಸುರಕ್ಷಿತವಾಗಿ ರಕ್ಷಣೆ ಮಾಡಿ, ಸಮೀಪದಲ್ಲಿರುವ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಮಗು ಯಾರದ್ದು ಅನ್ನೋದರ ಸುಳಿವನ್ನ ಸ್ವತಃ ಆ ಮಗುವೇ ನೀಡಿದೆ. ಹೌದು, ಮಗುವಿನ ಕೈಗೆ ಕಟ್ಟಿದ ಗುರುತಿನ ಚೀಟಿ ಹಾಗೆ ಇದ್ದು, ಅದರಲ್ಲಿ ಮಗುವಿನ ತಾಯಿ ಯಾರು, ತಂದೆ ಯಾರು.. ಎಲ್ಲಿಯವರು ಅನ್ನೋ ವಿಳಾಸ ಗೊತ್ತಾಗಿದೆ. ಮಗುವಿನ ಕೈಯಲ್ಲಿದ್ದ ಗುರುತಿನ ಚೀಟಿಯಿಂದ ಸುಲಭವಾಗಿ ಪೋಷಕರನ್ನ ಗುರುತಿಸಲು ಸಾಧ್ಯವಾಗಿದೆ.
ಮೂಡಿಗೆರೆ ತಾಲೂಕಿನ ಗ್ರಾಮವೊಂದರ 25 ವರ್ಷದ ವ್ಯಕ್ತಿಗೆ ಇಬ್ಬರು ಪತ್ನಿಯರಿದ್ದು, ಇಬ್ಬರಿಗೂ ಕೂಡ ಒಂದೊಂದು ಗಂಡು ಮಗು ಇದೆ. ಅಕ್ಕ-ತಂಗಿಯರನ್ನ ವರಿಸಿದ್ದ ಆತ, ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಮೊದಲ ಪತ್ನಿಗೆ 3 ವರ್ಷದ ಗಂಡು ಮಗುವಿದ್ದು, ಎರಡನೇ ಪತ್ನಿಗೆ ಎರಡು ವರ್ಷದ ಗಂಡು ಮಗುವಿದೆ. ಇದೀಗ ಮತ್ತೆ ಎರಡನೇ ಪತ್ನಿ 12 ದಿನದ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ನಿನ್ನೆ ಆಸ್ಪತ್ರೆಗೆ ಮಗುವನ್ನ ಕರೆದುಕೊಂಡು ಬಂದಿದ್ದ ದಂಪತಿ, ಮಗುವನ್ನ ಬಿಳಗುಳ ಸಮೀಪದ ಪೊದೆಯೊಂದರಲ್ಲಿ ಬಿಸಾಕಿ ಊರಿಗೆ ಹೋಗಿದ್ದಾರೆ.
ಅಕ್ಕಪಕ್ಕದ ಮನೆಯವರಿಗೆ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿತು ಅಂತಾ ತಿಳಿಸಿದ್ದಾರೆ. ಸಂಜೆ ಮಗು ಸಿಕ್ಕ ಬಳಿಕ ವಿಚಾರಣೆ ಮಾಡಿದಾಗ, ಈಗಾಗಲೇ ಇಬ್ಬರು ಮಕ್ಕಳಿದ್ದು ಮಗು ಸಾಕಲು ಕಷ್ಟ ಆಗುತ್ತದೆ ಎಂದು ಎಸೆದು ಬಂದಿರುವುದಾಗಿ ಹೇಳಿಕೆ ನೀಡಿದ್ದಾರೆ.