ಜಾತಿ ಸಮೀಕ್ಷೆ ವರದಿ ಸೋರಿಕೆ ಆಗಿಲ್ಲ, ಸಮೀಕ್ಷೆ ಯಾವುದೇ ಜಾತಿ, ವರ್ಗದ ವಿರುದ್ಧ ನಡೆಸಿದ್ದಲ್ಲ : ಸಿದ್ದರಾಮಯ್ಯ | ಜನತಾ ನ್ಯೂಸ್
ಬೆಂಗಳೂರು : ಜಾತಿ ಸಮೀಕ್ಷೆ ಇನ್ನೂ ಬಿಡುಗಡೆಯೇ ಆಗಿಲ್ಲ. ಯಾರ ಪರ, ವಿರುದ್ಧ ಅಂತಾ ಹೇಗೆ ಹೇಳಲು ಸಾಧ್ಯ?. ನನ್ನ ಪ್ರಕಾರ ವರದಿ ಸೋರಿಕೆ ಆಗಿಲ್ಲ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ವೀರಶೈವ ಒಕ್ಕಲಿಗ ಮೊದಲಾದ ಪ್ರಬಲ ಸಮುದಾಯಗಳನ್ನು ಅಲ್ಪಸಂಖ್ಯಾತ ಮಾಡುವ ಉದ್ದೇಶ ಸಿದ್ಧರಾಮಯ್ಯರಿಗಿದೆ ಎಂಬ ಆರೋಪಕ್ಕೆ ಅವರು ಪ್ರತಿಕ್ರಿಯಿಸಿದರು. ಎಲ್ಲಾ ಜಾತಿಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಪರಿಸ್ಥಿತಿ ಏನು ಎಂದು ತಿಳಿದುಕೊಳ್ಳಲು ಸಮೀಕ್ಷೆ ನಡೆಸಲಾಗಿದೆ.
ದಾಖಲಾತಿಗಾಗಿ ಸಮೀಕ್ಷೆ ನಡೆಸಲಾಯಿತು. ಯಾವುದೇ ದುರುದ್ದೇಶ ಅಥವಾ ಜಾತಿ, ವರ್ಗದ ವಿರುದ್ಧವೂ ಇಲ್ಲ ಎಂದರು.ನಮ್ಮ ಅವಧಿಯಲ್ಲಿ ವರದಿ ಇನ್ನೂ ಸಿದ್ಧವಾಗಿರಲಿಲ್ಲ. ಕುಮಾರಸ್ವಾಮಿ ಅವಧಿಯಲ್ಲಿ ಪೂರ್ಣವಾಗಿತ್ತು. ಆದರೆ, ಬಿಡುಗಡೆ ಮಾಡಲು ಹೆಚ್ಡಿಕೆ ಒಪ್ಪಲಿಲ್ಲ. ಇದೀಗ ಬಿಜೆಪಿ ಸರ್ಕಾರ ಬಿಡುಗಡೆ ಮಾಡಬೇಕು.
ಲಿಂಗಾಯತರು ಮತ್ತು ಒಕ್ಕಲಿಗರನ್ನ ಅಲ್ಪಸಂಖ್ಯಾತರನ್ನಾಗಿ ಮಾಡಲು ವರದಿ ತಯಾರಿಸಿಲ್ಲ. ಪ್ರತಿ ಸಮುದಾಯಗಳಿಗೆ ಸಾಮಾಜಿಕ ಸ್ಥಾನ ನೀಡಲು ಇದೊಂದು ದಾಖಲಾತಿ.ಇದನ್ನು ಅನುಸರಿಸಿ ಸಾಮಾಜಿಕ ನ್ಯಾಯ ನೀಡಲು ಸಾಧ್ಯ. ಬಿಹಾರದ ನಿತೀಶ್ ಕುಮಾರ್ ಈಗ ಜಾತಿ ಸಮೀಕ್ಷೆಗೆ ಆದೇಶ ನೀಡಿದ್ದಾರೆ.
ಸರ್ಕಾರ ಜಾತಿ ಸಮೀಕ್ಷೆ ವರದಿ ಮೊದಲು ಬಿಡುಗಡೆ ಮಾಡಲಿ ಎಂದು ಒತ್ತಾಯಿಸಿದರು. ಜಾತಿ ಸಮೀಕ್ಷೆ ಬಗ್ಗೆ ಸದನದಲ್ಲಿ ಪ್ರಶ್ನೆ ಮಾಡ್ತೀರಾ? ಎನ್ನುವ ಪ್ರಶ್ನೆಗೆ, ಮುಂದೆ ನೋಡೋಣ ಎಂದರು.