ಅಜ್ಜ-ಅಜ್ಜಿಯನ್ನು ನೋಡಲು ಬೆಂಗಳೂರಿಂದ ಕೊಡಗಿಗೆ ನಡೆದೇ ಹೊರಟ ಬಾಲಕಿ | ಜನತಾ ನ್ಯೂಸ್
ಬೆಂಗಳೂರು : ಬನಶಂಕರಿ ಠಾಣೆ ವ್ಯಾಪ್ತಿಯಿಂದ ನಾಪತ್ತೆಯಾಗಿದ್ದ 15 ವರ್ಷದ ಬಾಲಕಿಯನ್ನು ಬರೋಬ್ಬರಿ 250 ಸಿಸಿ ಕ್ಯಾಮರಾ ಪರಿಶೀಲಿಸಿ ಪತ್ತೆ ಹಚ್ಚಿರುವ ಬನಶಂಕರಿ ಪೊಲೀಸರು ಕುಟುಂಬ ಸದಸ್ಯರಿಗೆ ಒಪ್ಪಿಸಿದ್ದಾರೆ.
ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಬಾಲಕಿ, ಕೊಡಗಿನಲ್ಲಿರುವ ಅಜ್ಜ-ಅಜ್ಜಿ ನೋಡಲೆಂದು ಬೆಂಗಳೂರಿನಿಂದ ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ನಡಿಗೆ ಮೂಲಕ 30 ಕಿ.ಮೀ ಕ್ರಮಿಸಿ ತಾವರೆಕೆರೆ ಬಳಿ ಮಹಿಳೆಯೊಬ್ಬರ ಮನೆಯಲ್ಲಿ ಆಶ್ರಯ ಪಡೆದಿದ್ದಳು. ಆ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಮನೆಗೆ ಹೋಗಿ ಬಾಲಕಿಯನ್ನು ಕರೆತರಲಾಗಿದೆ ಎಂದು ತಿಳಿದುಬಂದಿದೆ.
ತ್ಯಾಗರಾಜನಗರದ ನಿವಾಸಿ 15 ವರ್ಷದ ಬಾಲಕಿ ನಾಪತ್ತೆಯಾದವಳು. ಕೊಡಗಿನ ವಿರಾಜಪೇಟೆಯ ಅಯ್ಯಪ್ಪ ಕಳೆದ 9 ವರ್ಷಗಳಿಂದ ಬೆಂಗಳೂರಿನ ತ್ಯಾಗರಾಜನಗರದಲ್ಲಿ ವಾಸಿಸುತ್ತಿದ್ದಾರೆ. ಕೊಡಗಿನಲ್ಲಿರುವ ತಮ್ಮ ಮನೆಯಲ್ಲಿ ಕೆಲಸ ಮಾಡುವ ನೌಕರನ ಮೊಮ್ಮಗಳು 15 ವರ್ಷದ ಬಾಲಕಿಯನ್ನು ಓದಿಸಲು ಅಯ್ಯಪ್ಪ ಬೆಂಗಳೂರಿಗೆ ಕರೆ ತಂದಿದ್ದರು. ಬಾಲಕಿ ಯಡಿಯೂರಿನ ಸರ್ಕಾರಿ ಶಾಲೆಯಲ್ಲಿ 8ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ.
ಆ.21ರಂದು ಮಧ್ಯಾಹ್ನ ಬಾಲಕಿ ಮನೆಯಿಂದ ಏಕಾಏಕಿ ಹೊರ ಹೋಗಿದ್ದಳು. ನಂತರ ಊರಿಗೂ ತೆರಳದೆ, ಮನೆಗೂ ಹಿಂದಿರುಗದೆ ನಾಪತ್ತೆಯಾಗಿದ್ದಳು. ಅಯ್ಯಪ್ಪ ಈ ಬಗ್ಗೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಶೇಷ ತಂಡ ರಚಿಸಿ ನಾಪತ್ತೆಯಾದ ಬಾಲಕಿ ಪತ್ತೆ ಕಾರ್ಯದಲ್ಲಿ ತೊಡಗಿದ್ದರು.
ರಸ್ತೆಯಲ್ಲಿ ನಡೆದು ಸುಸ್ತಾಗಿದ್ದ ಬಾಲಕಿಯನ್ನು ಮಹಿಳೆಯೊಬ್ಬರು ಮಾತನಾಡಿಸಿದ್ದರು. ನನಗೆ ತಂದೆ-ತಾಯಿ ಇಲ್ಲ. ಕೊಡಗಿನಲ್ಲಿರುವ ಅಜ್ಜ- ಅಜ್ಜಿ ಮನೆಗೆ ಹೊರಟಿದ್ದೇನೆ ಎಂದಿದ್ದ ಬಾಲಕಿ, ಕೆಲದಿನ ಆಶ್ರಯ ನೀಡುವಂತೆ ಕೋರಿದ್ದಳು. ಅದಕ್ಕೆ ಒಪ್ಪಿದ್ದ ಮಹಿಳೆ, ಬಾಲಕಿಯನ್ನು ಕರೆದೊಯ್ದು ಮನೆಯಲ್ಲಿ ಇರಿಸಿಕೊಂಡಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಮನೆಗೆ ಹೋಗಿ ಬಾಲಕಿಯನ್ನು ಕರೆತರಲಾಗಿದೆ.
ಬಾಲಕಿಯನ್ನು ಈ ಬಗ್ಗೆ ವಿಚಾರಿಸಿದಾಗ, ಆಕೆ ತನ್ನ ಸ್ವಂತ ಊರಾದ ಕೊಡಗಿನಲ್ಲಿರುವ ಅಜ್ಜಿ-ತಾತನನ್ನು ಕಾಣುವ ಉದ್ದೇಶದಿಂದ ವಿರಾಜಪೇಟೆಗೆ ನಡೆದುಕೊಂಡು ಹೋಗಲು ನಿರ್ಧರಿಸಿರುವುದಾಗಿ ತಿಳಿಸಿದ್ದಾಳೆ.