ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ಮಾಡಿ,ಗಾಜು ನುಂಗಿದ ಆರೋಪಿ | ಜನತಾ ನ್ಯೂಸ್
ಶಿವಮೊಗ್ಗ : ಪ್ರಕರಣವೊಂದಕ್ಕೆ ಸಂಬಂಧಿಸಿ ವಾರಂಟ್ ಕೊಡಲು ತೆರಳಿದ್ದ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದ ಆರೋಪಿಯೊಬ್ಬ ಬಳಿಕ ಗಾಜಿನ ಚೂರುಗಳನ್ನು ನುಂಗಿದ ಘಟನೆ ವಿನೋಬ ನಗರದ ಶುಭಮಂಗಳ ಸಮುದಾಯ ಭವನದ ಬಳಿ ನಡೆದಿದೆ.
ದರೋಡೆ ಸೇರಿದಂತೆ ನಾಲ್ಕು ಪ್ರಕರಣಗಳಲ್ಲಿ ಆರೋಪಿಯಾಗಿರುವ ರೂಪೇಶ್ (22) ನ್ಯಾಯಲಯದ ವಿಚಾರಣೆಗೆ ಸತತ ಗೈರುಹಾಜರಾಗಿದ್ದ. ನ್ಯಾಯಾಲಯ ಆತನ ವಿರುದ್ಧ ವಾರಂಟ್ ಹೊರಡಿಸಿತ್ತು.
ಆರೋಪಿ ಶುಭಮಂಗಳ ಸಭಾ ಭವನದ ಬಳಿ ಇರುವ ಮಾಹಿತಿ ಪಡೆದ ಮುಖ್ಯ ಕಾನ್ಸ್ಟೆಬಲ್ ಮಂಜುನಾಥ್ ಅವರು ವಾರಂಟ್ ಜಾರಿ ಮಾಡಲು ಮುಂದಾಗಿದ್ದಾರೆ. ಅವರನ್ನು ಚರಂಡಿಗೆ ತಳ್ಳಿದ ಆರೋಪಿ ಬೈಕ್ನ ಕನ್ನಡಿ ಒಡೆದು ಚೂರುಗಳನ್ನು ನುಂಗಿದ್ದಾನೆ.
ಚರಂಡಿಯಲ್ಲಿ ಬಿದ್ದ ಕಾನ್ಸ್ಟೆಬಲ್ ತಲೆಗೆ ಪೆಟ್ಟಾಗಿದೆ. ರೂಪೇಶ್ ಅಸ್ತವ್ಯಸ್ಥಗೊಂಡಿದ್ದಾನೆ. ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಳಿಕ ಇಬ್ಬರನ್ನೂ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಪೊಲೀಸ್ ಸಿಬ್ಬಂದಿ ಮಂಜುನಾಥ್ ಅವರಿಗೆ ಚಿಕಿತ್ಸೆ ನೀಡಿ ವಾರ್ಡ್ ಗೆ ಶಿಫ್ಟ್ ಮಾಡಲಾಗಿದೆ. ಗಾಜು ನುಂಗಿರುವ ರೂಪೇಶ್ ಗೆ ಸ್ಕ್ಯಾನಿಂಗ್ ಮಾಡಲಾಗಿದೆ.
ಘಟನೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ವಿನೋಬನಗರ ಠಾಣೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.