ತಲಕಾವೇರಿ ಭೂಕುಸಿತ: 10 ದಿನಗಳ ನಂತರ ಕೊಳೆತ ಸ್ಥಿತಿಯಲ್ಲಿ ಮತ್ತೊಂದು ಮೃತದೇಹ ಪತ್ತೆ! | Janata news
ಮಡಿಕೇರಿ : ತಲಕಾವೇರಿಯ ಗುಡ್ಡ ಕುಸಿತ ಪ್ರಕರಣದಲ್ಲಿ ಭೂ ಸಮಾಧಿಯಾಗಿದ್ದ ಐವರ ಪೈಕಿ ಮತ್ತೊಬ್ಬರ ಮೃತ ದೇಹ ಇಂದು ಪತ್ತೆ ಆಗಿದೆ.
ಶವ ಕೊಳೆತ ಸ್ಥಿತಿಯಲ್ಲಿರುವುದರಿಂದ ಗುರುತು ಪತ್ತೆಯಾಗಿಲ್ಲ. ಈಗಾಗಲೇ ಆನಂದತೀರ್ಥ, ನಾರಾಯಣ ಆಚಾರ್ ಅವರ ಮೃತದೇಹ ಪತ್ತೆಯಾಗಿದ್ದು, ಇಂದು ದೊರೆತ ಶವದೊಂದಿಗೆ ಮೂವರು ಪತ್ತೆಯಾದಂತ್ತಾಗಿದೆ. ಉಳಿದ ಇಬ್ಬರಿಗಾಗಿ ಕಾರ್ಯಾಚರಣೆ ಚುರುಕುಗೊಂಡಿದೆ.
ಆಗಸ್ಟ್ 5ರಂದು ತಡರಾತ್ರಿ ಮಹಾಮಳೆಯಿಂದ ಬ್ರಹ್ಮಗಿರಿ ಬೆಟ್ಟ ಭಾರೀ ಪ್ರಮಾಣದಲ್ಲಿ ಕುಸಿದು ಎರಡು ಮನೆಗಳ ಮೇಲೆ ಬಿದ್ದಿತ್ತು. ಇದರಿಂದ ಐವರು ಜೀವಂತ ಸಮಾಧಿಯಾಗಿದ್ದರು.
ಅರ್ಚಕ ನಾರಾಯಣ ಆಚಾರ್, ಸಹೋದರ ಆನಂದ ತೀರ್ಥ, ಪತ್ನಿ ಶಾಂತ, ಸಹಾಯಕ ಅರ್ಚಕರಾದ ರವಿಕಿರಣ್ ಹಾಗೂ ಶ್ರೀನಿವಾಸ್ ಅವರು ನಾಪತ್ತೆಯಾಗಿದ್ದರು. ಈ ಪೈಕಿ ಆನಂದ ತೀರ್ಥ ಅವರ ಮೃತದೇಹ ಆ.8ರಂದು ಪತ್ತೆಯಾಗಿದ್ದರೆ, ಆ.11ರಂದು ನಾರಾಯಣ ಆಚಾರ್ ಅವರ ಮೃತದೇಹ ಪತ್ತೆಯಾಗಿತ್ತು.