ಕ್ಯಾನ್ಸರ್ ಗೆ ಸುಧಾರಿತ ಸಾವಯವ ಆಧಾರಿತ ಔಷಧೀಯ ಪದ್ದತಿಯಿಂದ ಪರಿಹಾರ ಸಾಧ್ಯ: ಡಾ. ದೇಸಾಯಿ | Janata news
ಕಾರವಾರ : ಅಲೋಪಥಿಕ್, ಆಯುರ್ವೇದಿಕ್, ಸಿದ್ಧ, ಹೋಮಿಯೋಪಥಿಕ್ ಮುಂತಾದ ವೈದ್ಯ ಪದ್ಧತಿಯಲ್ಲಿ ಪರಿಹಾರ ಕಾಣದ ಹಲವಾರು ಎನ್ಸಿಡಿಎಸ್ ರೋಗಗಳಿಗೆ ಹೊಸ ಸುಧಾರಿತ ಸಾವಯವ ಆಧಾರಿತ ಔಷಧೀಯ ವಿಜ್ಞಾನ ಪದ್ಧತಿಯಲ್ಲಿ ಪರಿಹಾರವಿದೆ, ಎಂದು ಗೋವಾದ ನವಜೀವನ್ ಗ್ಲೋಬಲ್ ಹೆಲ್ತ್ ಸೆಂಟರ್ ನ ಡಾ.ಎಂ.ಜಿ.ದೇಸಾಯಿ ತಿಳಿಸಿದರು.
ಅವರು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂದು ಕ್ಯಾನ್ಸರ್, ಕಿಡ್ನಿ ವೈಫಲ್ಯ, ಹೃದಯರೋಗ, ಮಧುಮೇಹ ಮುಂತಾದ ಎನ್ಸಿಡಿಎಸ್ ವ್ಯಾಪ್ತಿಗೆ ಒಳಪಟ್ಟ ಖಾಯಿಲೆಗಳು ಹೆಚ್ಚುತ್ತಿದೆ. ಇವುಗಳ ನಿರ್ವಹಣೆ ತುಂಬ ವೆಚ್ಚದಾಯಕವಾಗಿದೆ. ಆದರೆ ರೋಗ ಗುಣಮುಖವಾಗುವ ಸಾಧ್ಯತೆ ತುಂಬ ಕಡಿಮೆ. ಈ ಹಿನ್ನೆಲೆಯಲ್ಲಿ ಅಲ್ಲಿ ಪರಿಹಾರ ಕಾಣದ, ಜನರಿಗೆ ತುಂಬ ಕಡಿಮೆ ಖರ್ಚಿನಲ್ಲಿ ಅತೀ ಶೀಘ್ರವಾಗಿ ಗುಣಪಡಿಸುವ ಔಷಧೀಯ ಪದ್ಧತಿಯನ್ನು ಆವಿಷ್ಕರಿಸಲಾಗಿದೆ. ಈ ಪದ್ಧತಿಯನ್ವಯ ಹಣಗಳಿಸುವ ಉದ್ದೇಶ ಬದಿಗಿಟ್ಟು, ನೊಂದ, ಬಡ ಜನರ ಆರೋಗ್ಯ ಸೇವೆಯ ಗುರಿಯೊಂದಿಗೆ ಮುಂದಡಿ ಇಟ್ಟಿದ್ದೇನೆ. ಈ ಕುರಿತು ಅನೇಕ ವೈದ್ಯರಿಗೆ ತರಬೇತಿ ನೀಡುತ್ತಿದ್ದೇನೆ. ನನ್ನ ಸಂಶೋಧನೆಯ ಫಲ ಜಗತ್ತಿಗೆ ದೊರೆಯಬೇಕು. ಈ ಬಗ್ಗೆ ಡಬ್ಲುಎಚ್ಓನ ಗಮನಕ್ಕೂ ತರಲಾಗಿದೆ, ಎಂದು ಅವರು ಮಾಹಿತಿ ನೀಡಿದರು.
ಪರಿಸರ ಮಾಲೀನ್ಯ ಹಾಗೂ ವಿಷಕಾರಿ ಆಹಾರ, ರಾಸಾಯನಿಕ ಭರಿತ ಔಷಧಿ ಸೇವನೆಯಿಂದ ಮನುಷ್ಯನಿಗೆ ನಾನಾ ರೀತಿಯ ಕಾಯಿಲೆಗಳು ಉಂಟಾಗುತ್ತಿವೆ. ಈ ಪದ್ಧತಿಯನ್ವಯ ರಾಸಾಯನಿಕ ಮುಕ್ತ, ಸಂಪೂರ್ಣವಾಗಿ ಸಾವಯವ ಆಧಾರಿತ ಔಷಧಿಗಳನ್ನು ತಯಾರಿಸಲಾಗುತ್ತದೆ. ಅದೇ ರೀತಿ ನಮ್ಮ ದೇಹಕ್ಕೆ ಒಗ್ಗದ ವಿಷಕಾರಿ ಆಹಾರ ಕೈಬಿಟ್ಟು, ದೇಹಕ್ಕೆ ಬೇಕಾದ ಪೌಷ್ಠಿಕ ಆಹಾರವನ್ನು ಮಾತ್ರ ಸೇವನೆ ಮಾಡಲು ಸಲಹೆ ನೀಡಲಾಗುತ್ತದೆ. ಇಲ್ಲಿ ಶಿಸ್ತುಬದ್ಧ ಜೀವನ, ವ್ಯಾಯಾಮ ಅತೀ ಅವಶ್ಯಕವಾಗಿರುತ್ತದೆ. ಜತೆಗೆ ಅತೀ ಕಡಿಮೆ ವೆಚ್ಚದ ಶುದ್ಧ ಸಾವಯವ ಪದ್ಧತಿಯಲ್ಲಿ ತಯಾರಿಸಲಾದ ಔಷಧಿಗಳನ್ನು ರೋಗಿಗಳಿಗೆ ನೀಡಲಾಗುತ್ತದೆ. ಈ ಎಲ್ಲ ಮಾನದಂಡಗಳ ಅನ್ವಯಿಸಿಕೊಂಡು, ಗೋವಾದಲ್ಲಿ ರೋಗಿಗಳಿಗೆ ವೈದ್ಯಕೀಯ ಉಪಚಾರ ಮಾಡಲಾಗುತ್ತಿದೆ. ಕಳೆದ 15 ವರ್ಷಗಳಿಂದ ಗೋವಾ ಹಾಗೂ ಮಹಾರಾಷ್ಟ್ರದ ಸುಮಾರು 32 ಸಾವಿರಕ್ಕೂ ಹೆಚ್ಚಿನ ರೋಗಿಗಳು ಈ ಪದ್ಧತಿಯಿಂದ ಚಿಕಿತ್ಸೆ ಪಡೆದು ಆರೋಗ್ಯಕರ ಜೀವನ ಸಾಗಿಸುತ್ತಿದ್ದಾರೆ. ಅದರಲ್ಲಿ 10 ಸಾವಿರದಷ್ಟು ಕ್ಯಾನ್ಸರ್ ಪೀಡಿತ ರೋಗಿಗಳಿದ್ದಾರೆ. ಈ ಪದ್ಧತಿಯಲ್ಲಿ ಯಾವುದೇ ದುಷ್ಪರಿಣಾಮವಿಲ್ಲ. ಅನ್ಯ ಪದ್ಧತಿಯ ಔಷಧಿಯಂತೆ ಘಾಟು ವಾಸನೆ ಇಲ್ಲ. ಒಂದು ರೋಗಕ್ಕೆ ನೀಡಿದ ಔಷಧಿ ಬಹುರೋಗಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಉಲ್ಬಣಗೊಂಡ ಮಧುಮೇಹ, ಹೃದಯ ಕಾಯಿಲೆ, ಕಿಡ್ನಿ ತೊಂದರೆ ಹಾಗೂ ಸೋರಿಯಾಸೀಸ್ನಂತಹ ಚರ್ಮರೋಗವನ್ನು ಪರಿಣಾಮಕಾರಿಯಾಗಿ ಗುಣಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪದ್ಧತಿಯನ್ನು ಇತರೆ ಪದ್ಧತಿಗಳಿಗೆ ಪರ್ಯಾಯವಾಗಿ ಜನಪ್ರಿಯಗೊಳಿಸುವ ಪ್ರಯತ್ನ ಸಾಗಿದೆ, ಎಂದರು.
ದಕ್ಷಿಣ ಗೋವಾ ಹಾಗೂ ಉತ್ತರ ಕನ್ನಡ ಜಿಲ್ಲೆಯ ಉತ್ತರ ಭಾಗದಲ್ಲಿ ಕಿಡ್ನಿ ಸಮಸ್ಯೆ ಹಾಗೂ ಕ್ಯಾನ್ಸರ್ ನಂತಹ ಅನೇಕ ಕಾಯಿಲೆಗಳು ಹೆಚ್ಚಾಗಿ ಕಂಡು ಬರುತ್ತಿದೆ. ಸದ್ಯ ದಕ್ಷಿಣ ಗೋವಾ ಕೇಂದ್ರಸ್ಥಾನವನ್ನಾಗಿಟ್ಟುಕೊಂಡು ಇಂತಹ ರೋಗಿಗಳಿಗೆ ಆರೋಗ್ಯ ಸೇವೆ ನೀಡುವ ಯೋಜನೆ ರೂಪಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ರೋಗಿಗಳ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಕಾರವಾರದ ಸದಶಿವಗಡದಲ್ಲಿ ಡಾ.ಮುಕಾದ್ದಂ ನೇತ್ರತ್ವದಲ್ಲಿ ಆನ್ಲೈನ್ ಕೇಂದ್ರ ತೆರೆಯಲಾಗುವುದು ಎಂದರು. ಈ ಸಂದರ್ಭದಲ್ಲಿ ಡಾ.ಹೀರನ್ ಶಾ, ಡಾ.ಮುಕಾದ್ದಂ, ಚೇತನ್ ಜೋಶಿ ಉಪಸ್ಥಿತರಿದ್ದರು.